‘ಯಾಕ್ ಸರ್ ಪ್ರತಿ ಸಲ ಸೈನಿಕರ ಕುಟುಂಬಕ್ಕೇ ಕಣ್ಣೀರು ಹಾಕುವ ಪರಿಸ್ಥಿತಿ ಬರುತ್ತೆ? ಯಾಕೆ ಸರ್, ಯಾಕೆ ವಿಐಪಿಗಳ ವಿಮಾನ ಕ್ರ್ಯಾಶ್ ಆಗಲ್ಲ? ಅದೇಕೆ ಸೈನಿಕರಿಗೆ ಹಳೆ ಪ್ಲೇನ್ ಗಳನ್ನು ಕೊಡಲಾಗುತ್ತೆ ಸರ್? ಉತ್ತರ ಹೇಳಿ, ಸರ್.. ನಂಗೆ ಉತ್ತರ ಹೇಳಿ…’
ಮಂಗಳವಾರ ಲಘು ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಅರೆಸೇನಾಪಡೆಯ ಯೋಧರಿಗೆ ಗೌರವ ಸಲ್ಲಿಸಲು ಹೋಗಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ, ಮೃತಯೋಧರ ಕುಟುಂಬದ ಯುವತಿಯೊಬ್ಬಳು ಕೇಳಿದ ಆರ್ದ್ರ ಪ್ರಶ್ನೆ ಇದು.
ಸಚಿವರಿಗೂ ಈ ಪ್ರಶ್ನೆ ಕೇಳಿ ಕಣ್ಣೀರುಕ್ಕಿತು. ಕರವಸ್ತ್ರ ತೆಗೆದು ಕಣ್ಣೀರೊರೆಸಿಕೊಂಡರು.
ಅವಘಡಕ್ಕೆ ಒಳಗಾದ ವಿಮಾನ 22 ವರ್ಷಗಳದ್ದಾಗಿತ್ತು. ಆದರೆ ಬಿಎಸ್ ಎಫ್ ನ ಪ್ರಧಾನ ನಿರ್ದೇಶಕ ಡಿ. ಕೆ ಪಾಠಕ್ ಪ್ರತಿಕ್ರಿಯಿಸಿ- ‘ವಿಮಾನ ಹಳೆಯದಾಗಿತ್ತೆಂಬ ವಾದ ಸರಿಯಲ್ಲ. 40-45 ವರ್ಷಗಳವರೆಗೂ ಬಳಕೆಗೆ ಬರುವ ವಿಮಾನ ಅದಾಗಿತ್ತು. ಅಧಿಕಾರಿಗಳನ್ನು ಕರೆದೊಯ್ಯುವುದಕ್ಕೆ ನಿಯಮಿತವಾಗಿ ಬಳಸುವ ವಿಮಾನವೇ ಇದಾಗಿತ್ತು’ ಎಂದು ಸ್ಪಷ್ಟನೆ ನೀಡಿದ್ದಾರೆ.