ಡಿಜಿಟಲ್ ಕನ್ನಡ ಟೀಮ್
67ನೇ ಗಣರಾಜ್ಯೋತ್ಸವದ ಅಂಗವಾಗಿ ಭದ್ರತಾ ಪಡೆಗಳ ಯೋಧರಿಗೆ ಒಟ್ಟೂ 365 ಶೌರ್ಯ ಪ್ರಶಸ್ತಿಗಳು ಘೋಷಣೆಯಾಗಿವೆ. ಈ ಪೈಕಿ ಶಾಂತಿ ಕಾಲದ ಅತ್ಯುನ್ನತ ಮಿಲಿಟರಿ ಗೌರವ ಎಂದರೆ ಅಶೋಕ ಚಕ್ರ. ಲ್ಯಾನ್ಸ್ ನಾಯಕ್ ಮೋಹನ್ ನಾಥ್ ಗೋಸ್ವಾಮಿ ಅವರಿಗೆ ಈ ಗೌರವ ಮರಣೋತ್ತರವಾಗಿ ಸಂದಿದೆ.
ಕಳೆದ ಸೆಪ್ಟೆಂಬರ್ ನಲ್ಲಿಉಗ್ರರೊಂದಿಗೆ ಹೋರಾಡುತ್ತ, ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸಿ ತಾವು ಪ್ರಾಣತ್ಯಾಗ ಮಾಡಿದ್ದರು ಮೋಹನ್ ನಾಥ್ ಗೋಸ್ವಾಮಿ. ಕುಪ್ವಾರಾದ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಉಗ್ರರನ್ನು ಬೇಟೆಯಾಡಲು ಹೋಗುವಾಗ ಅದಾಗಲೇ ಒಂದು ಕಾರ್ಯಾಚರಣೆ ಮುಗಿಸಿಬಂದಿದ್ದ ಗೋಸ್ವಾಮಿಯವರು ಅಲ್ಲಿ 10 ಉಗ್ರರನ್ನು ಮಗಿಸಿದ್ದರು.
ಉಗ್ರರೊಂದಿಗೆ ಚಕಮಕಿ ಶುರುವಾದಾಗ ತಂಡದಲ್ಲಿದ್ದ ಇಬ್ಬರಿಗೆ ಗುಂಡು ತಗುಲಿದ್ದವು. ಅವರಲ್ಲಿ ಒಬ್ಬರು ಇವರ ಸೀನಿಯರ್. ಗುಂಡಿನ ಮಳೆಯ ನಡುವೆಯೇ ಇಬ್ಬರು ಸಹವರ್ತಿಗಳನ್ನು ಸುರಕ್ಷಿತ ಪ್ರದೇಶಕ್ಕೆ ತಂದರಲ್ಲದೇ, ಇಬ್ಬರು ಉಗ್ರರನ್ನೂ ಹೊಡೆದುಹಾಕಿದರು. ಆದರೆ ಈ ಸಂಘರ್ಷದಲ್ಲಿ ಅವರಿಗೆ ಗಂಭೀರ ಗಾಯಗಳಾದವು. ಗಾಯಗಳ ತೀವ್ರತೆಯಿಂದಲೇ ಅವರು ತೀರಿಕೊಂಡರು.
ಈ ಬಾರಿಯ ಹೆಚ್ಚಿನ ಶೌರ್ಯ ಸಮ್ಮಾನಗಳೆಲ್ಲವೂ ಜಮ್ಮು-ಕಾಶ್ಮೀರದಲ್ಲಿ ಒಳನುಸುಳುವಿಕೆ ಮತ್ತು ಉಗ್ರವಾದವನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಯೋಧರಿಗೆ ಸಿಕ್ಕಿದೆ.
ಕಳೆದ ವರ್ಷ ಮೇನಲ್ಲಿ ನೇಪಾಳದ ಭೀಕರ ಭೂಕಂಪದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ನಿರ್ಮಲ್ ಕುಮಾರ್ ಭಕ್ಷಿ ಮತ್ತು ರಾಜೀವ್ ಧೋಬಾಲ್ ಅವರಿಗೆ ವಾಯುಸೇನಾ ಶೌರ್ಯ ಪದಕ ದೊರೆತಿದೆ.


ಸಮುದ್ರ ಮಧ್ಯೆ ಹವಾಮಾನ ವೈಪರೀತ್ಯದಿಂದ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿದ್ದ ಎಮ್ ವಿ ಜಿಂದಾಲ್ ಕಾಮಾಕ್ಷಿ ನೌಕೆಯ 19 ಮಂದಿಯನ್ನು ರಕ್ಷಿಸಿದ ನೌಕಾ ಕಮಾಂಡರ್ ಸಂಜಯ್ ಶುಕ್ಲ ಅವರು ನೌಕಾಸೇನಾ ಶೌರ್ಯ ಪದಕ ಗೌರವ ಪಡೆದಿದ್ದಾರೆ.