ಅಪ್ ಡೇಟ್ ಮಾಹಿತಿ – ಈ ಲೇಖನದ ಜತೆಗಿರುವ ವಿಡಿಯೋ ಹನುಮಂತಪ್ಪ ರಕ್ಷಣೆಗೆ ಸಂಬಂಧಿಸಿದ್ದಲ್ಲ, ಬೇರೆ ಸಂದರ್ಭದಲ್ಲಿ ಹಿಮಪಾತವಾದಾಗ ಚಿತ್ರೀಕರಿಸಿದ್ದು ಅಂತ ಭಾರತೀಯ ಸೇನೆಯ ಟ್ವಿಟರ್ ಖಾತೆ ಸಾರಿದೆ. ಹೀಗಾಗಿ, ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಲ್ಯಾನ್ಸ್ ನಾಯಕ್ ಹನುಮಂತಪ್ಪನವರ ರಕ್ಷಣಾ ಕಾರ್ಯದ ವಿಡಿಯೋ ಇದಲ್ಲ, ಪ್ರಾತಿನಿಧಿಕ ದೃಶ್ಯ ತುಣುಕು ಎಂಬ ಅವಗಾಹನೆಯಲ್ಲಿ ನೋಡಿ.
ಡಿಜಿಟಲ್ ಕನ್ನಡ ಟೀಮ್
ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಹತ್ತು ಯೋಧರ ಪೈಕಿ, ಆರು ದಿನಗಳ ನಂತರವೂ ಬದುಕಿ ಮೇಲ್ಬಂದ ಯೋಧ ಒಬ್ಬರೇ- ಕರ್ನಾಟಕದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್. ತುರ್ತು ನಿಗಾ ಘಟಕದಲ್ಲಿತುಂಬ ಕ್ಲಿಷ್ಟ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧ ಬದುಕಿ ಬರಲೆಂದು ದೇಶವೇ ಪ್ರಾರ್ಥಿಸುತ್ತಿದೆ.
19600 ಅಡಿಗಳ ಎತ್ತರದಲ್ಲಿ ಅಸೀಮ ಸವಾಲುಗಳನ್ನು ಎದುರಿಸಿ ರಕ್ಷಣಾ ಕಾರ್ಯಾಚರಣೆ ಮಾಡಿದ ಯೋಧರಿಗೆ, 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕೊಪ್ಪದ್ ಜೀವಂತವಾಗಿ ಸಿಕ್ಕಾಗ ವರ್ಣಿಸಲು ಪದಗಳಿರಲಿಲ್ಲ. ಇಲ್ಲಿದೆ ಆ ರೋಮಾಂಚಕ ಕ್ಷಣಗಳ ವಿಡಿಯೋ.
ವೀರಯೋಧನನ್ನು ದೆಹಲಿ ಆಸ್ಪತ್ರೆಗೆ ದಾಖಲಿಸುತ್ತಲೇ ತ್ವರಿತವಾಗಿ ಅಲ್ಲಿಗೆ ಧಾವಿಸಿ ಆಸ್ಪತ್ರೆ ಸಿಬ್ಬಂದಿಯಿಂದ ಯೋಧನ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿಯವರ ಸ್ಪಂದನೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ.
ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ 150 ಯೋಧಪಡೆಗೊಂದು ಸಲಾಂ! ಹಾಗೆಯೇ ಪತ್ತೆ ಕಾರ್ಯದಲ್ಲಿ ಮುಖ್ಯಪಾತ್ರ ವಹಿಸಿದ ಡಾಟ್ ಮತ್ತು ಮಿಶಾ ಎಂಬ ನಾಯಿಗಳಿಗೂ ಸಹ ದೇಶ ಕೃತಜ್ಞ.. ಒಂದು ಗುಂಪು ಮೂವತ್ತೇ ನಿಮಿಷ ಕಾರ್ಯಾಚರಣೆ ಮಾಡಬಲ್ಲದಾಗಿತ್ತು. ಏಕೆಂದರೆ ಎಂಥದೇ ಆಮ್ಲಜನಕ ಸಿಲಿಂಡರ್ ಕಟ್ಟಿಕೊಂಡರೂ ಮೈನಸ್ 50 ಡಿಗ್ರಿ ವಾತಾವರಣದಲ್ಲಿ ಅದಕ್ಕಿಂತ ಹೆಚ್ಚು ನಿಲ್ಲಲಾಗದು. ಹೀಗೆಂದೇ ಪಾಳಿ ಪ್ರಕಾರ ನಿಯೋಜನೆಗೊಂಡು ರಕ್ಷಮಾ ಕಾರ್ಯಾಚರಣೆ ನಡೆಸಿದರು ವೀರ ಯೋಧರು…
ಲ್ಯಾನ್ಸ್ ನಾಯಕ್ ಕೊಪ್ಪದ್ ಪತ್ನಿಯ ಮುಖದ ಈ ಮೃತ್ಯುಂಜಯ ನಗುವಿಗೆ ಸಾಟಿ ಏನಿಹುದು? (ಚಿತ್ರಕೃಪೆ- ಏಎನ್ ಐ ಸುದ್ದಿಸಂಸ್ಥೆ ಟ್ವಿಟರ್ ಖಾತೆ)
ಆತ ನನ್ನ ಕನಸಲ್ಲಿ ಬಂದು ಬದುಕಿರೋದಾಗಿ ಅವತ್ತೇ ಹೇಳಿದ್ದ ಎಂಬ ಈ ಅಮ್ಮನ ಪ್ರೀತಿಗೆ ಏನನ್ನೋಣ.. (ಚಿತ್ರಕೃಪೆ- ಏಎನ್ ಐ ಸುದ್ದಿಸಂಸ್ಥೆ ಟ್ವಿಟರ್ ಖಾತೆ)
We are proud by our Indian army