ಬೀಜ ಕಂಪನಿಗಳ ಬಗ್ಗೆ ಸಚಿವರ ಗರಂ
ರೈತರಿಗೆ ಬಿತ್ತನೆ ಬೀಜದಿಂದ ಆಗಿರುವ ನಷ್ಟಕ್ಕೆ ಮಾನ್ಸಾಂಟೋ ಮತ್ತು ಇತರೆ ಖಾಸಗಿ ಕಂಪೆನಿಗಳು ಕಾರಣ ಎಂದು ನಮ್ಮ ರಾಜ್ಯ ಕೃಷಿ ಸಚಿವ ಕೃಷ್ಣಭೈರೇಗೌಡ ಆರೋಪಿಸಿದ್ದಾರೆ. ಇಂಡಿಯಾ ಬಯೋ-2016ರ ಸಮ್ಮೇಳನದಲ್ಲಿಬೀಜ ಕಂಪನಿಗಳ ಬಗ್ಗೆ ಸಚಿವರು ಗರಂ ಆದ್ರು. ಬಿತ್ತನೆ ಬೀಜ ಕೈಕೊಟ್ಟ ಸಂಬಂಧ ರಾಜ್ಯಸರ್ಕಾರ ನೋಟಿಸ್ ನೀಡಿದರೆ, ನ್ಯಾಯಾಲಯದ ಮೂಲಕ ನಾವೇ ನೋಟೀಸ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯನ್ನು ಈ ಕಂಪನಿಗಳು ಸೃಷ್ಟಿಸುತ್ತವೆ. 2013ರಲ್ಲಿ ಇದೇ ರೀತಿ ಅವಘಡ ನಡೆದಿದ್ದು, 2015ರಲ್ಲಿಪೂರೈಸಿದ ಬಿತ್ತನೆ ಬೀಜಗಳಲ್ಲೂ ಲೋಪಗಳಿವೆ. ಆದರೆ ಇವಕ್ಕೆಲ್ಲ ಕಂಪನಿಗಳು ಹುಡುಕಿಕೊಂಡಿರುವ ಸಮರ್ಥನೆ ಎಂದರೆ- ಬಿತ್ತನೆ ಮಾಡಿದ ಬೀಜ 110 ದಿನಗಳ ನಂತರ ಬೆಳೆ ಬಾರದಿದ್ದರೆ, ಔಷಧಿ ಸಿಂಪಡಣೆ ಮಾಡುವಂತೆ ಪ್ಯಾಕೆಟ್ನಲ್ಲಿ ಸೂಚಿಸಲಾಗಿದೆ- ಎಂದು ಹೇಳೋದು. ಈ ರೀತಿಯಾಗಿ ತಾಂತ್ರಿಕ ಕಾರಣಗಳನ್ನು ಕೊಟ್ಟು ಮುಗ್ಧ ರೈತರನ್ನು ಮಣಿಸೋದು ಸರಿಯೇ ಅನ್ನೋದು ಸಚಿವರ ಪ್ರಶ್ನೆ.
ಲೈಂಗಿಕ ಕಿರುಕುಳ ಆರೋಪಿಗೇಕೆ ಹುದ್ದೆ? ಪಚೌರಿ ಹುಟ್ಟಿಸಿರೋ ಪ್ರಶ್ನೆ
ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪ ಎದುರಿಸಿದ ಪರಿಸರ ವಿಜ್ಞಾನಿ ರಾಜೇಂದ್ರ ಕುಮಾರ್ ಪಚೌರಿ ವೃತ್ತಿಜೀವನ ಬಹುತೇಕ ಅಂತ್ಯವಾಯಿತು ಎಂದು ಎಲ್ಲರು ಭಾವಿಸಿದ್ದರು. ಆದರೆ, ದ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (ಟಿಇಆರ್ ಐ)ನ ಉಪಾಧ್ಯಕ್ಷರಾಗಿ ಉನ್ನತ ಹುದ್ದೆಯನ್ನು ಪಡೆಯುವ ಮೂಲಕ ಮತ್ತೆ ಮರಳಿದ್ದಾರೆ. ಆರೋಪ ಮುಕ್ತರಾಗದ ಹೊರತಾಗಿಯೂ ಪಚೌರಿಗೆ ಉನ್ನತ ಹುದ್ದೆ ನೀಡಿರುವ ಕ್ರಮ ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
2015ರ ಫೆಬ್ರವರಿಯಲ್ಲಿ ಗುರ್ಗಾಂವ್ ನಲ್ಲಿರುವ ಟಿಇಆರ್ ಐ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 29 ವರ್ಷದ ಮಹಿಳೆ, ಐಪಿಸಿಸಿ ಅಧ್ಯಕ್ಷರಾಗಿದ್ದ ಪಚೌರಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಪಚೌರಿ ಐಪಿಸಿಸಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಟಿಇಆರ್ಐನಿಂದ ಹೊರಹಾಕಲು ಸಾಧ್ಯವಾಗಿರಲಿಲ್ಲ. ನಂತರ ಪ್ರಕರಣವನ್ನು ಸಂಸ್ಥೆಯ ಆತಂರಿಕ ಸಮಿತಿ ತನಿಖೆ ಆರಂಭಿಸಿತು. ಈ ಆರೋಪ ಹೊರಬರುತ್ತಿದ್ದಂತೆ ಮತ್ತಿಬ್ಬರು ಮಾಜಿ ನೌಕರರು ಈ ರೀತಿಯಾದ ಕಿರುಕುಳ ತಾವು ಅನುಭವಿಸಿದ್ದಾಗಿ ಆರೋಪಿಸಿದ್ದರು.
ಈ ಇಬ್ಬರು ಮಹಿಳೆಯರು ನೀಡಿದ್ದ ಸಾಕ್ಷ್ಯಾಧಾರಗಳನ್ನು ದೆಹಲಿ ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಹಿರಿಯ ವಕೀಲರಾದ ವೃಂದಾ ಗ್ರೋವರ್ ತಿಳಿಸಿದ್ದಾರೆ.
ಪ್ರಕರಣ ಆರಂಭವಾಗಿ ಒಂದು ವರ್ಷದ ನಂತರ ಆರೋಪ ಹೊರಿಸಿದ್ದ ಮಹಿಳೆ ಸಂಸ್ಥೆಯನ್ನು ಬಿಡುವಂತೆ ಮಾಡಿ, ಆರೋಪಿಯನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕೂರಿಸಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ದೆಹಲಿಯಲ್ಲಿ ಮತ್ತೆ ಸಮ-ಬೆಸ
ರಾಜಧಾನಿ ದೆಹಲಿಯಲ್ಲಿಎರಡನೆ ಬಾರಿಗೆ ಸಮ-ಬೆಸ ಸಂಚಾರ ನಿಯಮ ಜಾರಿಗೊಳಿಸಲು ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಚಿಂತಿಸಿದ್ದು ಗುರುವಾರ ಅಧಿಕೃತ ಘೋಷಣೆ ಆಗಲಿದೆ. ವಿವಿಧ ಮಾರ್ಗಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿರುವ 11 ಲಕ್ಷ ಪ್ರತಿಕ್ರಿಯೆಗಳನ್ನು ಪರಿಶಿಲಿಸಿದ ನಂತರ ತೀರ್ಮಾನಿಸಲಾಗುವುದು ಎಂದು ದೆಹಲಿ ಸಾರಿಗೆ ಸಚಿವ ಗೋಪಾಲ್ ರೈ ಬುಧವಾರ ತಿಳಿಸಿದ್ದಾರೆ. ನೊಂದಣಿ ಫಲಕ ಆಧಾರಿತ ಯೋಜನೆಯನ್ನೇ ಮತ್ತೊಮ್ಮೆ ಮುಂದುವರೆಸಲು ಚಿಂತಿಸಲಾಗಿದ್ದು ಏಪ್ರಿಲ್ ನಲ್ಲಿ ಎದುರಾಗುವ ಸಿಬಿಎಸ್ ಸಿ ಮಂಡಳಿಯ ಪರೀಕ್ಷೆ ಮುಗಿದ ನಂತರ ಸಮ-ಬೆಸ ಸಂಚಾರ ನಿಯಮ ಜಾರಿಗೊಳಿಸುವ ಬಗ್ಗೆ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸುಳಿವು ನೀಡಿದ್ದಾರೆ.
