ಡಿಜಿಟಲ್ ಕನ್ನಡ ಟೀಮ್:
ಪಾಕ್ ಹಾಗೂ ಭಾರತದ ನಡುವೆ ಏರ್ಪಟ್ಟಿದ್ದ ಯುದ್ಧದ ಕಾರ್ಮೋಡ ತಣ್ಣಗಾಗುವ ಲಕ್ಷಣ ಗೋಚರಿಸಿದೆ. ನಿನ್ನೆ ಸಂಜೆ ಪಾಕ್ ಸಂಸತ್ನಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಎಲ್ಲವನ್ನು ಸರಿ ದಾರಿಗೆ ಬರುವ ಸೂಚನೆ ನೀಡಿದೆ.
ನಾವು ಶಾಂತಿಯನ್ನು ಬಯಸುವ ಕಾರಣಕ್ಕೆ ಭಾರತದ ಪೈಲಟ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಹಿ ಸುದ್ದಿ ಬರುತ್ತೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದಿಂದ ಈ ಮಾಹಿತಿ ಹೊರ ಬಿದ್ದಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ಎಷ್ಟಿದೆ ಎಂಬುದಕ್ಕೆ ಸಾಕ್ಷಿ.
ಈ ಮಧ್ಯೆ ಅಮೆರಿಕ ಹಾಗೂ ಪಾಕಿಸ್ತಾನದಲ್ಲಿ ಈ ರೀತಿ ಬೆಳವಣಿಗೆಗಳು ಹೊರಬಂದ ಹಿನ್ನೆಲೆಯಲ್ಲಿ 5 ಗಂಟೆಗೆ ಮಾಧ್ಯಮಗೋಷ್ಠಿ ನಿಗದಿ ಮಾಡಿದ್ದ ಸೇನಾ ಮುಖ್ಯಸ್ಥರು ತಕ್ಷಣ ಸಮಯ ಬದಲಾವಣೆ ಮಾಡಿಕೊಂಡು ರಾತ್ರಿ 7 ಗಂಟೆಗೆ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಅದರಲ್ಲಿ ಪಾಕ್ ದಾಳಿ ಬಗ್ಗೆ ಮಾಹಿತಿ ನೀಡಿದ್ದು, ಆದರ ಬಣ್ಣ ಬಯಲು ಮಾಡಿದೆ.
ಫೆಬ್ರವರಿ 27ರ ಬೆಳಗ್ಗೆ 10 ಗಂಟೆಗೆ ಪಾಕಿಸ್ತಾನ ಸೇನೆಯ ಯುದ್ಧ ವಿಮಾನಗಳು ಏಕಾಏಕಿ ಭಾರತದತ್ತ ಬರುತ್ತಿದ್ದನ್ನು ನಮ್ಮ ರಡಾರ್ ಪತ್ತೆ ಮಾಡಿದವರು. ಪಶ್ಚಿಮ ರಜೌರಿ ಭಾಗದ ಅರಣ್ಯದಲ್ಲಿ ಹಾರಾಟ ಮಾಡುತ್ತಿದ್ದನ್ನು ಗಮನಿಸಿದ ಭಾರತೀಯ ವಾಯುಸೇನೆ, ಭಾರತದ ವಾಯು ಪ್ರದೇಶಕ್ಕೆ ಆಗಮಿಸುತ್ತಿದ್ದಂತೆ ನಮ್ಮ ಯುದ್ಧ ವಿಮಾನಗಳಾದ ಮಿಗ್ 21, ಸುಖೋಯ್ 30 ಎಂ ಕೆಐ, ಮಿರಾಜ್ 2000 ದಾಳಿ ಮಾಡಿದವು. ಈ ವೇಳೆ ಸೇನಾ ಕ್ಯಾಂಪ್ ಗುರಿಯಾಗಿಸಿ ದಾಳಿ ಮಾಡಿದ ಪಾಕ್ ಯುದ್ಧ ವಿಮಾನಗಳು ಸೇನಾ ಕ್ಯಾಂಪ್ನ ಕಾಂಪೌಂಡ್ ಬಳಿ ಬಾಂಬ್ ದಾಳಿ ಮಾಡಿದ್ವು. ಆದ್ರೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಈ ವೇಳೆ ನಮ್ಮ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ಸೇರಿದ F-16 ಯುದ್ಧ ವಿಮಾನವನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. ನಂತ್ರ ನಾವು ಎಫ್-16ನಲ್ಲಿ ದಾಳಿ ಮಾಡಿಲ್ಲ ಎಂದ್ರು. ಆದ್ರೆ ನಮ್ಮ ಬಳಿ ಎಫ್-16 ಯುದ್ಧ ವಿಮಾನದ ಅವಶೇಷಗಳಿವೆ ಎಂಬುದಕ್ಕೆ ಭಾರತೀಯ ಸೇನೆ ಸಾಕ್ಷಿ ಕೊಟ್ಟಿದೆ.
ಭಾರತೀಯ ವಾಯುಪಡೆಯ ಮಿಗ್ – 21 ಯುದ್ಧ ವಿಮಾನವನ್ನು ಪಾಕಿಸ್ತಾನ ವಾಯುಪಡೆಯ F – 16 ಯುದ್ಧ ವಿಮಾನ ಹೊಡೆದು ಉರುಳಿಸಿತು. ಈ ವೇಳೆ F – 16 ಯುದ್ಧ ವಿಮಾನದಲ್ಲಿದ್ದು ಇಬ್ಬರು ಪಾಕ್ ಪೈಲಟ್ಗಳು ಯುದ್ಧ ವಿಮಾನದಿಂದ ಕಳಚಿಕೊಂಡು ಪ್ಯಾರಚೂಟ್ ಬಳಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೇಫ್ ಲ್ಯಾಂಡ್ ಆಗಿದ್ದಾರೆ. ಇನ್ನು ನಮ್ಮ ಕಮಾಂಡರ್ ಅಭಿನಂದನ್ ಕೂಡ ವಿಮಾನದಿಂದ ಕಳಚಿಕೊಂಡು ಪ್ಯಾರಚೂಟ್ ಬಳಸಿ ಕೆಳಕ್ಕಿಳಿದಾಗ ಪಾಕ್ ಸೇನೆ ವಶಕ್ಕೆ ಪಡೆದಿದೆ ಎಂದಿದ್ದಾರೆ.