ಡಿಜಿಟಲ್ ಕನ್ನಡ ಟೀಮ್:
ಬಿಜೆಪಿಯ ರಾಜಕೀಯ ಪಿತೂರಿಗೆ ನಾನು ಬಲಿಯಾಗಿದ್ದೇನೆ. ಈ ಷಡ್ಯಂತ್ರದಲ್ಲಿ ರಾಜಕೀಯ ಹಾಗೂ ಕಾನೂನಿನ ಪ್ರಕಾರ ನಾನು ಗೆಲ್ಲುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಪ್ಲಾಟ್ ನಲ್ಲಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿತು. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…
‘ನನ್ನನ್ನು ಬಂಧಿಸುವ ಪ್ರಯತ್ನದಲ್ಲಿ ಕೊನೆಗೂ ಯಶಸ್ವಿಯಾದ ಬಿಜೆಪಿ ಸ್ನೇಹಿತರಿಗೆ ಅಭಿನಂದನೆಗಳು.
ನನ್ನ ವಿರುದ್ಧದ ಐಟಿ ಹಾಗೂ ಇಡಿ ಪ್ರಕರಣಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಬಿಜೆಪಿಯ ರಾಜಕೀಯ ಪಿತೂರಿಗೆ ನಾನು ಬಲಿಪಶು ಆಗಿದ್ದೇನೆ.
ನಾನು ಯಾವುದೇ ಅಕ್ರಮ ಮಾಡಿಲ್ಲ. ಹೀಗಾಗಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಬೇಸರವಾಗುವುದು ಬೇಡ ಎಂದು ಮನವಿ ಮಾಡುತ್ತೇನೆ.
ದೇವರು ಹಾಗೂ ದೇಶದ ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ರಾಜಕೀಯ ಷಡ್ಯಂತ್ರದಲ್ಲಿ ನಾನು ಕಾನೂನು ಹಾಗೂ ರಾಜಕೀಯವಾಗಿ ಗೆದ್ದು ಬರುವೆ.’