ಡಿಜಿಟಲ್ ಕನ್ನಡ ಟೀಮ್:
ಕರೋನಾ ವೈರಸ್ ಸೋಂಕಿನಿಂದ ಸತ್ತವರ ಪ್ರಮಾಣ 213ಕ್ಕೆ ಏರಿಕೆಯಾಗಿದ್ದು, ಒಟ್ಟು 9,692 ಸೋಂಕು ಪ್ರಕರಣ ದಾಖಲಾಗಿವೆ. ಹಲವರ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಪ್ರಪಂಚಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
“ನಾವು ಈ ವೈರಸ್ ಹಬ್ಬುವುದನ್ನು ತಡೆಯುವಂತೆ ಮಾಡಲು ಪ್ರಯತ್ನಿಸಬೇಕು. ನಾವು ಒಟ್ಟಾದಾಗ ಮಾತ್ರ ಅದು ಸಾಧ್ಯ,” ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇನ್ನು, ಚೀನಾದಿಂದ ಭಾರತಕ್ಕೆ ಆಗಮಿಸಿದ ಕೇರಳದ ವಿದ್ಯಾರ್ಥಿಗೆ ಈ ವೈರಸ್ ಇರುವುದು ಅಧಿಕೃತವಾಗಿದೆ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಈತ ಅಧ್ಯಯನ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಇದರೊಂದಿಗೆ ಭಾರತಕ್ಕೆ ಕೊರೋನಾ ವೈರಸ್ ಪ್ರವೇಶ ಖಚಿತವಾಗಿದೆ.
ಜನವರಿ 25 ಚೀನಾಗೆ ಹೊಸ ವರ್ಷವಾಗಿದ್ದು, ಹೀಗಾಗಿ, ರಜೆಯ ಮಜ ಕಳೆಯಲು ವಿಶ್ವದ ನಾನಾ ಭಾಗಕ್ಕೆ ಚೀನಾ ದೇಶದವರು ಪ್ರವಾಸಕ್ಕೆ ತೆರಳುವವರಿದ್ದರು. ಹೀಗಾಗಿ ಪ್ರವಾಸ ಕೈಗೊಳ್ಳುವುದಕ್ಕೆ ಸರ್ಕಾರ ನಿರ್ಬಂಧ ಹೇರಿದೆ. ಪರಿಣಾಮ ವಿಶ್ವದ ಇತರೆ ದೇಶಗಳಲ್ಲಿ ಈ ವೈರಸ್ ವೇಗವಾಗಿ ಹಬ್ಬದಂತೆ ನಿಯಂತ್ರಣ ಮಾಡಲಾಗಿದೆ.