ಡಿಜಿಟಲ್ ಕನ್ನಡ ಟೀಮ್:
ಚೀನಾದಲ್ಲಿ ಮರಣ ಮೃದಂಗ ಬಾರಿಸಿರುವ ಕೊರೋನಾ ವೈರಸ್, ಇದೀಗ ನಮ್ಮ ಕರುನಾಡಿಗೂ ಕಾಲಿಟ್ಟಿದೆ. ಹೈದ್ರಾಬಾದ್ ಮೂಲದ ಬೆಂಗಳೂರು ಟೆಕ್ಕಿ ದುಬೈನಿಂದ ವಾಪಸ್ ಆಗಿದ್ದು, ಆತನಿಗೆ ಕೊರೋನಾ ವೈರಸ್ ಇರುವುದು ಪತ್ತೆಯಾಗಿದೆ.
ದುಬೈನಿಂದ ಫೆಬ್ರವರಿ 17ರಂದು ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಈತ, ಫೆಬ್ರವರಿ 20ರಂದು ದುಬೈನಿಂದ ವಾಪಸ್ ಆಗಿದ್ದ. ಆ ಬಳಿಕ ಬೆಂಗಳೂರಿನಲ್ಲೇ ಸಂಬಂಧಿಕರ ಜೊತೆ ಕಾಲ ಕಳೆದು ತವರೂರು ತೆಲಂಗಾಣ ರಾಜಧಾನಿ ಹೈದ್ರಾಬಾದ್ಗೆ ಬಸ್ನಲ್ಲಿ ತೆರಳಿದ್ದ. ದುಬೈನಿಂದ ಬಂದ ಬಳಿಕ ಯಾರನ್ನು ಭೇಟಿ ಮಾಡಿದ್ದ. ಯಾರ ಯಾರ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ್ದ. ಯಾವ ಬಸ್ನಲ್ಲಿ ಪ್ರಯಾಣಿಸಿದ..? ಬಸ್ನಲ್ಲಿ ಯಾರ ಜೊತೆಗಿದ್ದ. ಕೊರೋನಾ ವೈರಸ್ ಇರುವುದು ದೃಢವಾಗುವ ಮುಂಚೆ ಹೈದ್ರಾಬಾದ್ನಲ್ಲಿ ಯಾರನ್ನೆಲ್ಲಾ ಭೇಟಿಯಾಗಿದ್ದ ಎನ್ನುವ ಬಗ್ಗೆ ಆರೋಗ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.
ಬೆಂಗಳೂರಿನ ಟೆಕ್ಕಿಗೆ ಕೊರೋನಾ ವೈರಸ್ ಪತ್ತೆಯಾದ ಬಳಿಕ ಆರೋಗ್ಯ ಸಚಿವ ಶ್ರೀರಾಮುಲು ಸಭೆ ನಡೆಸಿದ್ರು. ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಬಳಿಕ ಮಾತಾಡಿದ ಶ್ರೀರಾಮುಲು, ಕೊರೋನ ವೈರಸ್ ಬಗ್ಗೆ ಈಗಾಗಲೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಸುಮಾರು 300 ಜನ ವಿದೇಶಿ ಪ್ರವಾಸಿಗರ ರಕ್ತ ಪರಿಕ್ಷೆಯಲ್ಲಿ ನೆಗೆಟೀವ್ ಬಂದಿದೆ. ರಾಜ್ಯದ ಎಲ್ಲಾ ಖಾಸಗಿ ಹಾಗು ಸರ್ಕಾರಿ ಆಸ್ಪತ್ರೆಗಳಲ್ಲಿ 10 ಬೆಡ್ಗಳನ್ನು ಕೊರೋನೋ ವೈರಸ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದಿದ್ದಾರೆ.
ಇನ್ನು ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವಾಗ ಹೈದ್ರಾಬಾದ್ ವ್ಯಕ್ತಿ ಜೊತೆಗಿನ ಸಹ ಪ್ರಯಾಣಿಕರು, ಬೆಂಗಳೂರಿನಲ್ಲಿ ಒಂದು ದಿನ ಆತ ಸಂಪರ್ಕಿಸಿದ್ದ ವ್ಯಕ್ತಿಗಳು, ಹೈದರಾಬಾದ್ಗೆ ಪ್ರಯಾಣಿಸಿದ ಸಹಪ್ರಯಾಣಿಕರು ಎಲ್ಲರನ್ನೂ ಸಂಪರ್ಕಿಸಲಾಗಿದೆ. ಟೆಕ್ಕಿ ಒಂದು ದಿನ ಪಿಜಿಯಲ್ಲಿ ಇದ್ದಾಗ ಆತನ ಜೊತೆಯಲ್ಲಿದ್ದ ರೂಮೇಟ್ನನ್ನೂ ಕೂಡ ವಿಶೇಷ ಘಟಕದಲ್ಲಿಟ್ಟು ಕೊರೋನಾ ಸೋಂಕು ತಗುಲಿರುವ ಬಗ್ಗೆ ತಪಾಸಣೆ ನಡೆಸಲಾಗ್ತಿದೆ. ರಾಜ್ಯ ಆರೋಗ್ಯ ಇಲಾಖೆ ಒಟ್ಟು 80 ಜನರ ಪಟ್ಟಿಯನ್ನು ತಯಾರಿಸಿ ಅವರೆಲ್ಲರನ್ನೂ ಸಂಪರ್ಕ ಮಾಡಿ ಪರೀಕ್ಷೆ ಮಾಡಲು ಮುಂದಾಗಿದೆ. ಆತ ಕೆಲಸ ಮಾಡುವ ಕಂಪನಿ ಸಿಬ್ಬಂದಿಗೆ ರಜೆ ಘೋಷಣೆ ಮಾಡುವಂತೆ ಮಾಲೀಕರನ್ನು ಸಂಪರ್ಕಿಸಿ ಸೂಚಿಸಲಾಗಿದೆ. ಒಂದು ವೇಳೆ ರಜೆ ಸಾಧ್ಯವಾಗದಿದ್ದರೆ ಮುಂದಿನ 14 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ಟೆಕ್ಕಿಯಲ್ಲಿ ಕೊರೋನಾ ಸೋಂಕು ಪತತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ರಾಜ್ಯದ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಕಳೆದ ಒಂದು ತಿಂಗಳಿಂದ ಕೊರೋನಾ ವೈರಸ್ ಭೀತಿ ಇದ್ದು, ಕಳೆದ ಒಂದು ವಾರದಿಂದ 2 ರಿಂದ 3 ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಗಿದೆ. ಆದರೆ ಇಂದು ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ವೈರಸ್ ಪತ್ತೆಯಾದ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರದ ಅಧಿಕಾರಿಗಳಿಗೆ ರಾಜ್ಯ ಸಕಾರದ ಅಧಿಕಾರಿಗಳು ವಿವರಣೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೋನಾ ವೈರಸ್ ತಡೆಗಟ್ಟಲು ತೆಗೆದುಕೊಂಡಿರುವ ಕ್ರಮಗಳು ಹಾಗು ಜನರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮ ಬಗ್ಗೆ ಮಾಹಿತಿ ಕೇಳಿದ್ದಾರೆ. ರಾಜ್ಯ ಸರ್ಕಾರದ ಕಡೆಯಿಂದ ಕೊರೋನಾ ವೈರಸ್ ಹರಡುವಿಕೆ ಬಗ್ಗೆ ಪೋಸ್ಟರ್, ರೇಡಿಯೋ, ಟಿವಿ ಜಾಹೀರಾತು ನೀಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೋನಾ ವೈರಸ್ಗೆ ಎರಡು ಹಾಸ್ಪಿಟಲ್ಗಳಲ್ಲಿ ಮಾತ್ರ ಚಿಕಿತ್ಸೆ ಮಾಡಲಾಗುತ್ತೆ. ಅದರಲ್ಲಿ ಒಂದು ಬೆಳಗೂರಿನ ರಾಜೀವ್ ಗಾಂಧಿ ಆಸ್ಪತ್ರೆ. ಮತ್ತೊಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ಗೆ ಚಿಕಿತ್ಸೆ ಕೊಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಉಳೀದ ಎಲ್ಲಾ ಜಿಲ್ಲಾ ಆಆಸ್ಪತ್ರೆಗಳಲ್ಲು 5 ಬೆಡ್ನ ವಿಶೇಷ ವಾರ್ಡ್ಗಳ ಘಟಕೆ ತೆರೆಯಲಾಗಿದೆ. ಆದರೆ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ವೈರಸ್ಗೆ ಚಿಕಿತ್ಸೆ ಕೊಡುವುದಿಲ್ಲ. ಬದಲಿಗೆ ಸೋಂಕು ಅನುಮಾನಿತ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾದರೆ ದಾಖಲು ಮಾಡಿಕೊಂಡು ರಕ್ತಪಡೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಒಂದೇ ದಿನದಲ್ಲಿ ರಕ್ತದ ಪರೀಕ್ಷೆ ಬರಲಿದ್ದು, ಕೊರೋನಾ ವೈರಸ್ ಇರುವ ಬಗ್ಗೆ ಪಾಸಿಟಿವ್ ಬಂದರೆ ಬೆಂಗಳೂರು ಅಥವಾ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ ಎಂದು ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದ್ದಾರೆ.