ಡಿಜಿಟಲ್ ಕನ್ನಡ ಟೀಮ್:
ಕರ್ನಾಟದಲ್ಲಿ ಇಂದು ಮೊದಲ ಬಾರಿಗೆ ಒಂದೇ ದಿನ ಬರೋಬ್ಬರಿ 36 ಹೊಸ ಪ್ರಕರಣಗಳ ದಾಖಲಾಗಿವೆ. ಏಕಾಏಕಿ ಒಂದೇ ಬಾರಿಗೆ 315ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಬೆಳಗಾವಿಯ ಕುಡಚಿ ಪಟ್ಟಣದಲ್ಲಿ ಇವತ್ತು ಮತ್ತೆ ಏಳು ಜನರಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ರಾಯಭಾಗದ ತಾಲೂಕಿನ ಕುಡಚಿ ಪಟ್ಟಣ ಕೊರೊನಾ ಹಾಟ್ಸ್ಪಾಟ್ ಆಗಿದೆ. ಕುಡಚಿ ಪಟ್ಟಣ ಒಂದರಲ್ಲೇ ಬರೋಬ್ಬರಿ 17 ಪ್ರಕರಣಗಳು ಬೆಳಕಿಗೆ ಬಂದಿವೆ. ಕುಡಚಿಯ ಪೇಷೆಂಟ್ ನಂಬರ್ 294, P296, P297 ದೆಹಲಿಗೆ ಹೋಗಿ ಬಂದಿದ್ದಾರೆ. ಇನ್ನುಳಿದ ಪೇಷೆಂಟ್ ನಂಬರ್ 298, P299, P300, P301 ಇವರೆಲ್ಲರೂ ಪೇಷೆಂಟ್ ನಂಬರ್ 245ರ ಜೊತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಕುಡಚಿ ಪಟ್ಟಣ ಸಂಪೂರ್ಣ ಸೀಲ್ಡೌನ್ ಮಾಡಿದ್ದು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಕುಡಚಿ ಪಟ್ಟಣ ಸಂಪೂರ್ಣ ಸೀಲ್ಡೌನ್ ಮಾಡಲು ಬ್ಯಾರಿಕೇಡಗಳನ್ನ ಹಾಕಿ ಗಲ್ಲಿ ಗಲ್ಲಿಗಳನ್ನ ಸೀಲ್ ಮಾಡಿದೆ ಜಿಲ್ಲಾಡಳಿತ.
ಈ ನಡುವೆ ನಂಜನಗೂಡು ಜ್ಯುಬಿಲಿಯಂಟ್ ಕಂಪನಿ ಪ್ರಕರಣಗಳು ತಬ್ಲಿಘಿ ಘಟನೆ ಬಳಿಕ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ ಸೋಂಕಿನ ಮೂಲ. ಮೈಸೂರಿನ ನಂಜನಗೂಡು ಜ್ಯುಬಿಲಿಯೆಂಟ್ ಪ್ರಕರಣದ ಮೂಲ ಇಲ್ಲೀವರೆಗೂ ಪತ್ತೆ ಆಗಿರಲಿಲ್ಲ. ಸೋಂಕಿನ ಮೂಲ ಪತ್ತೆ ಮಾಡಲು ಮೈಸೂರು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ ಇಂದು ಅಂತಿಮವಾಗಿ ಜ್ಯುಬಿಲಿಯೆಂಟ್ಗೆ ಸೋಂಕು ತಗುಲಲು ಚೀನಾವೇ ಪ್ರಮುಖ ಕಾರಣ ಎನ್ನುವ ಅಂಶ ಬೆಳಕಿಗೆ ಬಂದಿದೆ. ನಂಜನಗೂಡಿನ ಜ್ಯುಬಿಲಿಯೆಂಟ್ ಕಂಪನಿ ನೌಕರ ಚೀನಾಗೆ ಹೋಗಿ ಬಂದಿದ್ದ. ಆದರೆ ಆ ವಿಚಾರವನ್ನು ಮುಚ್ಚಿಡಲಾಗಿತ್ತು. ಇದೀಗ ಕೊರೊನಾ ಕೇಸ್ಗೆ ಲಿಂಕ್ ಪತ್ತೆಯಾಗಿದೆ. ಕೊರೊನಾ ಅಟ್ಟಹಾಸದ ಮೂಲ ಪತ್ತೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ಕೊಟ್ಟಿದ್ದಾರೆ. ಚೈನಾ ಲಿಂಕ್ನಿಂದ ಕೊರೊನಾ ವೈರಸ್ ಹರಡಿರುವುದು ಕನ್ಫರ್ಮ್ ಆದಂತಾಗಿದೆ. ಚೈನಾ ಲಿಂಕ್ ಇರುವ ಬಗ್ಗೆ ಗೃಹ ಇಲಾಖೆ ಮಾಹಿತಿ ಕೊಟ್ಟಿದೆ ಎಂದಿದ್ದಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್.
ಈ ನಡುವೆ ಇವತ್ತು ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಸಾವು ಸಂಭವಿಸಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ 66 ವರ್ಷದ ಸೋಂಕಿತ ಮೊದಲು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಕೊರೊನಾ ಖಚಿತವಾದ ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಏಪ್ರಿಲ್ 10ರಿಂದ ವೆಂಟಿರೇಟರ್ನಲ್ಲಿದ್ದ ವೃದ್ಧ ಇವತ್ತು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಳಳದ ಜೊತೆಗೆ ಸೋಂಕಿನ ಸಂಖ್ಯೆಯೂ ಭಾರೀ ಮಟ್ಟದಲ್ಲಿ ಏರಿಕೆ ಆಗಿರುವ ಸರ್ಕಾರದ ನಿದ್ರೆಗೆಡಿಸಿದೆ. ಅದೂ ಅಲ್ಲದೆ ದೆಹಲಿಯ ನಿಜಾಮುದ್ದೀನ್ ಮರ್ಕಾಜ್ನ ತಬ್ಳಿಘೀ ಸಭೆಯಲ್ಲಿ ಭಾಗಿಯಾದವರು ಹಾಗೂ ಅವರ ಸಂಬಂಧಿರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ. ಮತ್ತಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುವುದರಿಂದ ಮುಂದೇನು ಮಾಡುವುದು ಎನ್ನುವ ಚಿಂತೆಯಲ್ಲಿ ಸರ್ಕಾರ ಮುಳುಗಿದೆ.