ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಜಿದ್ದಾಜಿದ್ದಿನ ರಾಜಕಾರಣ ಅಂದ್ರೆ ಮಂಡ್ಯ. ಇದೀಗ ಮಂಡ್ಯದಲ್ಲಿ ಕೊರೊನಾ ರಾಜಕೀಯ ಶುರುವಾಗಿದೆ. ಜೆಡಿಎಸ್ನಿಂದ ಗೆದ್ದು ಆಪರೇಷನ್ ಕಮಲಕ್ಕೆ ತುತ್ತಾರ ನಾರಾಯಣಗೌಡ, ಬಿಜೆಪಿ ಪಕ್ಷದಿಂದ ಮಂತ್ರಿ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ. ಹಾಗಾಗಿ ಬಿಜೆಪಿ ಸರ್ಕಾರ ಎಡವುತ್ತಿರುವುದನ್ನೇ ಕಾಯುಇತ್ತಿರುವ ಜೆಡಿಎಸ್ ನಾಯಕರು ಈಗ ನಾರಾಯಣ ಗೌಡರ ವಿರುದ್ಧ ಮುಗಿಬೀಳುತ್ತಿದ್ದಾರೆ.
ಬಾಂಬೆಯಿಂದ ಹೆಣವನ್ನು ಪಾಂಡವಪುರಕ್ಕೆ ಸಾಗಿಸಲು ಸಚಿವ ನಾರಾಯಣಗೌಡ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಅದೇ ಪ್ರಕರಣದಲ್ಲಿ ನಾಲ್ವರಿಗೆ ಕೊರೊನಾ ಸೋಂಕು ಕೂಡ ಖಚಿತವಾಗಿತ್ತು. ಅದಾದ ಬಳಿಕ ಕೆ.ಆರ್ ಪೇಟೆ ತಾಲೂಕಿನ ಕೆಲವು ಆಪ್ತರು ಬಾಂಬೆ ಖಾಲಿ ಮಾಡಿಕೊಂಡು ಬರುವುದಕ್ಕೆ ಸಹಾಯ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಎರಡ್ಮೂರು ದಿನಗಳ ಹಿಂದೆ ಕೆ.ಆರ್ ಪೇಟೆ ತಾಲೂಕಿನ ಜಾಗಿನಕೆರೆ ಗ್ರಾಮ ಇಬ್ಬರು ಮಹಿಳೆಯರಿಗೆ ಕೊರೊನಾ ಸೋಂಕು ಬಂದಿದೆ. ಜಾಗಿನಕೆರೆ ಸಚಿವ ನಾರಾಯಣಗೌದ ಅವರ ಊರಾದ ಕೈಗೋನಹಳ್ಳಿ ಪಕ್ಕದಲ್ಲೇ ಇದೆ. ಬಾಂಬೆಯಿಂದ ಇನ್ನೋವಾ ಕಾರಿನಲ್ಲಿ ಬಂದಿದ್ದಾರೆ. ಅಷ್ಟೊಂದು ಚೆಕ್ಪೋಸ್ಟ್ಗಳನ್ನು ದಾಟಿಕೊಂಡು ಬರುವುದಕ್ಕೆ ಘರ್ಬಿಣಿ ಮಹಿಳೆಯ ತಾಯಿ ಕಾರ್ಡ್ ತೋರಿಸಿ ಬಂದಿದ್ದಾರೆ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಅಸಲಿ ಗೆ ಪಕ್ಕದ ಊರಿನ ಪರಿಚಯಸ್ಥ ಜನರಿಗೆ ಸಚಿವರೇ ಸಹಾಯ ಮಾಡಿದ್ದಾರೆ, ಇದೇ ರೀತಿ ಕೆ.ಆರ್ ಪೇಟೆ ಹಳ್ಳಿ ಹಳ್ಳಿಯಲ್ಲಿ ಜನರನ್ನು ಕರೆತಂದಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಅಷ್ಟೇ ಅಲ್ಲದೆ ಇದೀಗ ಜಾಗಿನ ಕೆರೆಯಲ್ಲಿ ಪಾಸಿಟೀವ್ ಬಂದಿರುವ ಗರ್ಭಿಣಿ ಹಾಗೂ ಇನ್ನೋರ್ವ ಎಂಜಿನಿಯರ್ ವಿದ್ಯಾರ್ಥಿಯನ್ನು ಚಿಕಿತ್ಸೆಗಾಗಿ ಕ್ವಾರಂಟೈನ್ ಮಾಡಿದ್ದಾರೆ. ಇನ್ನುಳಿದ ಪ್ರಾಥಮಿಕ ಸಂಪರ್ಕಿತರನ್ನು ಹೋಂ ಕ್ವಾರಂಟೈನ್ ಮಾಡಿಸಿದ್ದಾರೆ ಎನ್ನುವ ಆರೋಪವೂ ಎದುರಾಗಿದೆ. ಜೊತೆಗೆ ಸಾರಂಗಿ ಗ್ರಾಮ ಸೋಂಕಿತ ಗರ್ಭಿಣಿ ತವರು ಮನೆಯಾಗಿದ್ದು, ಸಾರಂಗಿ ಗ್ರಾಮದಿಂದಲೂ ಸಾಕಷ್ಟು ಜನರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಹೀಗಿದ್ದರೂ ಸಚಿವರ ಅಕ್ಕಪಕ್ಕದ ಊರಿನವರು ಎನ್ನುವ ಕಾರಣಕ್ಕೆ ಕ್ವಾರಂಟೈನ್ ಕೂಡ ಮಾಡಿಲ್ಲ. ಸೀಲ್ಡೌನ್ ಕೂಡ ಮಾಡಿಲ್ಲ ಎನ್ನುವುದು ಸುತ್ತಮುತ್ತಲ ಗ್ರಾಮಸ್ಥರ ಆರೋಪವಾಗಿದೆ.
ಇದೀಗ ಬಾಂಬೆಯಲ್ಲಿ ಸಿಲುಕಿರುವ ಕೆ.ಆರ್ ಪೇಟೆ ಜನರನ್ನು ಕರೆತಂದು ನಾಗಮಂಗಲ ತಾಲೂಕಿನ ಕದಬಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ಮುಂದಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಕೆ.ಆರ್ ಬಪೇಟೆ ತಾಲೀಕನ ಜನರು ಬಾಂಬೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿದ್ದು, ಅವರನ್ನು ಕರೆತಂದು ಎ ನಾಗತೀಹಳ್ಳಿ ಬಳಿಕ ಕದಬಹಳ್ಳಿಯಲ್ಲಿ ಇಟ್ಟು ನಂತರ ಮನೆಗಳಿಗೆ ಕಳುಹಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಇಂದು ಉಸ್ತುವಾರಿ ಸಚಿವ ನಾರಾಯಣಗೌಡ, ಸ್ಥಳಪರಿಶೀಲನೆಗೆ ಬರುತ್ತಾರೆ ಎನ್ನುವುದು ಜನರಿಗೆ ಮೊದಲೇ ಗೊತ್ತಾಗಿತ್ತು. ಜನರೂ ಜಮಾಯಿಸಿದ್ದರು. ನಾಗಮಂಗಲ ಶಾಸಕ ಸುರೇಶ್ ಗೌಡ ಕೂಡ ಆಗಮಿಸಿದ್ದರು. ಸಚಿವರಿಗೆ ಸ್ಥಳೀಯರು ಘೇರಾವ್ ಹಾಕಿದ್ರು. ರೈತ ಮುಖಂಡರು ಸಚಿವರನ್ನು ತರಾಟೆಗೆ ತೆಗೆದುಕೊಂಡು ಜನವಸತಿ ಪ್ರದೇಶದಲ್ಲಿ ವಸತಿ ಶಾಲೆಯಿದೆ. ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರಂಟೈನ್ ಮಾಡಲು ಅವಕಾಶ ಕೊಡುವುದಿಲ್ಲ ಎಂದರು. ಆ ನಂತರ ಅನಿವಾರ್ಯವಾಗಿ ಸಚಿವ ನಾರಾಯಣಗೌಡ ಕೇವಲ ನಾಗಮಂಗಲದ ಜನರನ್ನು ಮಾತ್ರ ಇಲ್ಲಿ ಕ್ವಾರಂಟೈನ್ ಮಾಡ್ತೇವೆ ಎಂದರು. ಆಗ ಶಾಸಕ ಸುರೇಶ್ ಗೌಡ, ನಮ್ಮ ತಾಲೂಕಿನ ಜನರನ್ನು ಕರೆತನ್ನಿ ನಾವು ಅವರಿಗೆ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡ್ತೇವೆ ಎಂದರು. ಅನಿವಾರ್ಯವಾಗಿ ಸಚಿವರು ಅಲ್ಲಿಂದ ಕಾಲ್ಕೀಳುವಂತಾಯ್ತು..