ಡಿಜಿಟಲ್ ಕನ್ನಡ ಟೀಮ್:
ರಾಜಸ್ಥಾನ ಕಾಂಗ್ರೆಸ್ ಸರ್ಕಾರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಸ್ಥಾನದಿಂದ ಬಂಡಾಯ ನಾಯಕ ಸಚಿನ್ ಪೈಲಟ್ ಅವರನ್ನು ಎರಡೂ ಸ್ಥಾನಗಳಿಂದ ವಜಾ ಮಾಡಲಾಗಿದೆ.
ಸುದೀರ್ಘ ಒಂದು ವಾರದಿಂದ ರಾಜಸ್ಥಾನ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಂಡಾಯಕ್ಕೆ ಪಕ್ಷ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಎಚ್ಚರಿಕೆ ಗಂಟೆ ಬಾರಿಸಿದೆ.
ನಿನ್ನೆ ಶಾಸಕಾಂಗ ಪಕ್ಷದ ಸಭೆಯಲ್ಲಿ 102 ಶಾಸಕರ ಬೆಂಬಲ ಪಡೆದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಭದ್ರಪಡಿಸಿಕೊಂಡರು.
ಇಂದೂ ಸಹ ಗೆಹ್ಲೋಟ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರು. ನಿನ್ನೆ ಹಾಗೂ ಇಂದು ನಡೆದ ಸಭೆಗೆ ಭಾಗವಹಿಸದ ಕಾರಣ ಮುಂದಿಟ್ಟುಕೊಂಡು ಸಚಿನ್ ಪೈಲಟ್ ಅವರನ್ನು ಅವರ ಸ್ಥಾನದಿಂದ ವಜಾ ಮಾಡಲಾಗಿದೆ.
ಅಲ್ಲದೆ, ಸಚಿನ್ ಪೈಲಟ್ ಅವರಿಗೆ ಬೆಂಬಲ ಸೂಚಿಸಿದ್ದ ಇಬ್ಬರು ಸಚಿವರನ್ನೂ ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧಿಕೃತ ಘೋಷಣೆ ಮಾಡಿದೆ.